Dharmasthala
ಧರ್ಮಸ್ಥಳ ಹಾಗೂ ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಸಮೀರ್ ಎಂಬ ಯುವಕ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ. ಕೆಲವು ನಿಮಿಷಗಳ ವಿಡಿಯೋ ಅದೆಷ್ಟು ಹಲ್ ಚಲ್ ಎಬ್ಬಿಸಿದೆ ಎಂದರೆ ಸ್ವತಃ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅವರು ರಾಜ್ಯದ ಎಲ್ಲ ಜಿಲ್ಲೆಗಳ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದು, ಸಮೀರ್ ಎಂಬ ಯುವಕನ ವಿಡಿಯೋ ಬಗ್ಗೆ ಉಲ್ಲೇಖ ಮಾಡಿದ್ದಾರೆ.
ಎಲ್ಲ ಪೊಲೀಸ್ ಆಯುಕ್ತರಿಗೆ (ಕಮೀಷನರ್) ಹಾಗೂ ಎಲ್ಲ ವಲಯ ಪೊಲೀಸ್ ಮಹಾನಿರ್ದೇಶಕರುಗಳಿಗೆ ಫ್ಯಾಕ್ಸ್ ಮೂಲಕ ಎಡಿಜಿಪಿ ಅವರು ಸೂಚನೆ ನೀಡಿದ್ದು ಸಮೀರ್ ಎಂಬ ಯುವಕ ಧರ್ಮಸ್ಥಳದಲ್ಲಿ ಈ ಹಿಂದೆ ನಡೆದಿದ್ದ ಸೌಜನ್ಯ ಎಂಬ ಯುವತಿಯ ಕೊಲೆ ಘಟನೆ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು , ಘಟಕಾಧಿಕಾರಿಗಳು ಈ ಮಾಹಿತಿಯನ್ನು ತಮ್ಮ ಘಟಕಗಳಲ್ಲಿರುವ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮೂಲಕ ಮೇಲಧಿಕಾರಿಗಳ ಗಮನಕ್ಕೆ ತರುವಲ್ಲಿವಿಫಲರಾಗಿರುತ್ತೀರಿ ಎಂದಿದ್ದಾರೆ.
ಸಮೀರ್ ಮಾಡಿರುವ ವಿಡಿಯೋದ ಪರ- ವಿರೋಧ ಚರ್ಚೆ ತುರುಸುನಿಂದ ನಡೆದು ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬರುವ ಸಾಧ್ಯತೆ ಇದೆ. ಹಾಗಾಗಿ ಘಟಕಾಧಿಕಾರಿಗಳು ಈ ಕೂಡಲೆ ಕಾರ್ಯಪ್ರವೃತ್ತರಾಗಿ ನಿಮ್ಮ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಅನ್ನು ಚುರುಕುಗೊಳಿಸಿ, ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಡಿ ಎಂದು ಸೂಚಿಸಿದ್ದಾರೆ.
Dharmasthala: ಧರ್ಮಸ್ಥಳದ ಬಗ್ಗೆ ಹರಿದಾಡುತ್ತಿರುವ ವಿಡಿಯೋನಲ್ಲಿ ಸತ್ಯ ಎಷ್ಟಿದೆ?
ಸಮೀರ್, ಧರ್ಮಸ್ಥಳದ ಬಗ್ಗೆ ಮಾಡಿರುವ ವಿಡಿಯೋ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ನಡೆದಿದೆ. ಅಸಲಿಗೆ ಸಮೀರ್, ವಿಡಿಯೋದಲ್ಲಿ ಕೇಳಿರುವ ಪ್ರಶ್ನೆಗಳನ್ನು ಈ ಹಿಂದೆ ಹಲವು ಸಾಮಾಜಿಕ ಕಾರ್ಯಕರ್ತರು ಕೇಳಿದ್ದಾರೆ. ಪೊಲೀಸರು ಇದೀಗ ಕಾರ್ಯಪ್ರವೃತ್ತರಾಗಿದ್ದು, ಈ ವಿಷಯದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವವರ ಬಗ್ಗೆ ಗಮನ ಹರಿಸಲಿದ್ದಾರೆ.