Ashwini Puneeth Rajkumar
ದೊಡ್ಮನೆ ಕುಟುಂಬ ಎಂದು ಗೌರವದಿಂದ ಕರೆಯಲಾಗುವ ರಾಜ್ ಕುಮಾರ್ ಕುಟುಂಬದವರು ಸಿನಿಮಾ ಮೂಲಕ ಮನರಂಜನೆ ನೀಡುವ ಜೊತೆಗೆ ಅಣ್ಣಾವ್ರು ಹಾಕಿಕೊಟ್ಟ ಸಮಾಜ ಸೇವೆಯ ಹಾದಿಯನ್ನು ಮುಂದುವರೆಸಿದ್ದಾರೆ. ಶಿವಣ್ಣ, ಬಡ ಹೆಣ್ಣು ಮಕ್ಕಳಿಗಾಗಿ ಶಕ್ತಿಧಾಮ ವಸತಿ ಶಾಲೆ ನಡೆಸುತ್ತಿದ್ದಾರೆ. ಶಿವಣ್ಣನ ಪತ್ನಿ ಗೀತಕ್ಕನೂ ಈ ಕಾರ್ಯದಲ್ಲಿ ಪತಿಗೆ ಹೆಗಲಾಗಿ ಇದ್ದಾರೆ. ಇನ್ನು ಅಪ್ಪು ಸಹ ಹಲವಾರು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಪ್ಪು ಹೋದಮೇಲೆ ಆ ಕಾರ್ಯಗಳನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ನಡೆಸಿಕೊಂಡು ಹೋಗುತ್ತಿದ್ದಾರೆ.
ಕರ್ನಾಟಕದಲ್ಲಿ ನೇತೃದಾನ ಒಂದು ಚಳವಳಿಯಾಗಿ ನಡೆಯಲು ಕಾರಣರಾಗಿದ್ದು ಡಾ ರಾಜ್ ಕುಮಾರ್ ಅವರು. ಅಣ್ಣಾವ್ರು ನೇತ್ರದಾನ ಮಾಡಿದ್ದರೆಂಬ ಕಾರಣಕ್ಕರ ಲಕ್ಷಾಂತರ ಮಂದಿ ನೇತ್ರದಾನಕ್ಕೆ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದರು. ಅಪ್ಪು ಸಹ ನೇತ್ರದಾನ ಮಾಡಿದ್ದರು, ಅಲ್ಲದೆ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಇದೀಗ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಆ ಕಾರ್ಯವನ್ನು ಮುಂದುವರೆಸಿದ್ದಾರೆ.
ಸೇವೆ ಮತ್ತು ಭಕ್ತಿಗೆ ಹೆಸರುವಾಸಿ ಆಗಿರುವ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್, ಮಠದಲ್ಲಿ ಪುನೀತ್ ರಾಜ್ ಕುಮಾರ್ ಟ್ರಸ್ಟ್ ಅನ್ನು ಉದ್ಘಾಟನೆ ಮಾಡಿದ್ದಲ್ಲದೆ, ಅಲ್ಲಿನ ಮಕ್ಕಳಿಗೆ ಟ್ರಸ್ಟ್ ವತಿಯಿಂದ ಉಚಿತ ಕಣ್ಣಿನ ಪರೀಕ್ಷೆ ಮಾಡಿಸಿ, ಅಗತ್ಯವಿದ್ದವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಿದ್ದಾರೆ. ಅಪ್ಪು ಅವರಿಗೂ ಸಿದ್ದಗಂಗಾ ಮಠಕ್ಕೂ ಅವಿನಾಭಾವ ಸಂಬಂಧ ಇತ್ತು ಆ ಸಂಬಂಧವನ್ನು ಅಶ್ವಿನಿ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
Kumbh Mela: ಕುಂಭಮೇಳ: ತ್ರಿವೇಣಿಯ ನೀರು ಸ್ನಾನ ಮತ್ತು ಸೇವಿಸಲು ಯೋಗ್ಯವೇ?
ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದ ಬಳಿಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪಿಆರ್ ಕೆ ಸ್ಟುಡಿಯೋಸ್ ಮತ್ತು ನಿರ್ಮಾಣ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದು, ಸಿನಿಮಾ ನಿರ್ಮಾಣ ಸೇರಿದಂತೆ ಇತರೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಲವು ಕಷ್ಟಗಳ ನಡುವೆ ಅಪ್ಪು ಕಂಡ ಕನಸುಗಳನ್ನು ಈಡೇರಿಸುವ ಕಾರ್ಯ ಮಾಡುತ್ತಿದ್ದಾರೆ.