Business
ಕರ್ನಾಟಕ ರಾಜ್ಯ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಇತ್ತೀಚೆಗಷ್ಟೆ ವಿಧಾನಸಭೆಯಲ್ಲಿ ಆಸಕ್ತಿಕರ ಅಂಶವೊಂದನ್ನು ಬೆಳಕಿಗೆ ತಂದಿದ್ದಾರೆ. ಅದೇನೆಂದರೆ ಕರ್ನಾಟಕದಲ್ಲಿ ಬರೋಬ್ಬರಿ 40 ಸಾವಿರ ಕೋಟಿ ಮೌಲ್ಯದ ಕಳ್ಳ ವ್ಯವಹಾರ ಹಾಡ ಹಗಲೆ ನಡೆಯುತ್ತಿದೆ ಆದರೆ ಅದನ್ನು ಮಟ್ಟ ಹಾಕಲು ಪೊಲೀಸ್, ಸರ್ಕಾರ, ನ್ಯಾಯಾಲಯ ಯಾವುದರಿಂದಲೂ ಸಾಧ್ಯ ಆಗುತ್ತಿಲ್ಲ.
ಸಚಿವರು ಹೇಳಿರುವ ಕಳ್ಳ ವ್ಯವಹಾರ ಬೇರಾವುದೂ ಅಲ್ಲ, ಅದುವೇ ಬಡ್ಡಿ ಸಾಲ. ಈ ಬಡ್ಡಿ ಸಾಲದ ಪೆಂಡಂಭೂತ ಕರ್ನಾಟಕದ ತುಂಬೆಲ್ಲ ಇದೆ. ರಾಜ್ಯದಲ್ಲಿ ತಿಂಗಳಿಗೆ 10%, 20% ಬಡ್ಡಿ ಪಡೆಯುವವರು ಸಹ ಇದ್ದಾರೆ. ಈ ಬಡ್ಡಿ ವ್ಯವಹಾರ, ಮೈಕ್ರೋ ಫೈನ್ಯಾನ್ಸ್, ಮನಿ ಲೆಂಡರ್ಸ್ ಗಳಿಂದಾಗಿ ವರ್ಷಕ್ಕೆ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರಿಂದ ಲಕ್ಷಾಂತರ ಹಣವನ್ನು ಬಡ್ಡಿ ರೂಪದಲ್ಲಿ ತೆಗೆದುಕೊಳ್ಳುತ್ತಿರುವ ಈ ಅಸುರರು, ತೆರಿಗೆ ಕಟ್ಟದೆ ಸರ್ಕಾರಕ್ಕೂ ಮಂಕು ಬೂದಿ ಎರಚುತ್ತಿದ್ದಾರೆ.
ಇದೇ ಕಾರಣಕ್ಕೆ ಇದೀಗ ಸರ್ಕಾರವು ಜನಗಳ ಹಿತ ಕಾಪಾಡಲೆಂದು ಇಂಥಹಾ ಮೈಕ್ರೋ ಫೈನ್ಯಾನ್ಸ್, ಮನಿ ಲೆಂಡರ್ಸ್ ಗಳ ವಿರುದ್ಧ ಕಾಯ್ದೆಯೊಂದನ್ನು ತಂದಿದೆ. ಅಕ್ರಮವಾಗಿ ಬಡ್ಡಿಗೆ ಹಣ ನೀಡುವ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಈ ಕಾಯ್ದೆ ವರ್ತಿಸಲಿದ್ದು, ಆರೋಪ ಸಾಬೀತಾದರೆ ,10 ವರ್ಷ ಜೈಲು ಶಿಕ್ಷೆ, 5 ಲಕ್ಷ ಜುಲ್ಮಾನೆಯನ್ನು ವಿಧಿಸಲಾಗುತ್ತದೆ.
ಕಾಯ್ದೆ ಮಂಡಿಸಿ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್, ಕಾನೂನಿನ ಅಡಿಯಲ್ಲಿ ಉದ್ಯಮ ಮಾಎಉವ ವ್ಯಕ್ತಿ ವಾರ್ಷಿಕ 20 ಅಥವಾ 30% ಲಾಭ ಮಾಡಬಹುದು ಆದರೆ ಈ ಬಡ್ಡಿಕೋರರು ವರ್ಷಕ್ಕೆ 50% ಹಣ ಮಾಡುತ್ತಿದ್ದಾರೆ ಎಂದಿದ್ದಾರೆ. ಇತ್ತೀಚೆಗಷ್ಟೆ ಈ ಮೈಕ್ರೋಫೈನ್ಯಾನ್ಸ್ ಗಳಿಂದಾಗಿ ರಾಜ್ಯದ ಕೆಲವರು ಆತ್ಮಹತ್ಯೆಗೆ ಶರಣಾದ ಬಳಿಕ ರಾಜ್ಯ ಸರ್ಕಾರ ಇದೀಗ ಈ ಕಾಯ್ದೆಯನ್ನು ಮುಂದಿಟ್ಟಿದೆ.
Businessman: ರಸ್ತೆ ಬದಿಯಲ್ಲಿ ಹಾಲು ಮಾರುತ್ತಿದ್ದ ವ್ಯಕ್ತಿಯ ಆದಾಯ ಈಗ ದಿನಕ್ಕೆ 32 ಕೋಟಿ
ಇಂತಹಾ ಬಡ್ಡಿಕೋರರ ವಿರುದ್ಧ ಈಗಾಗಲೇ ಕಾನೂನುಗಳು ಇವೆ. ಆದರೆ ಆ ಕಾನೂನುಗಳು ಬಹಳ ವೀಕ್ ಆಗಿವೆ. ಈ ಬಡ್ಡಿಕೋರರನ್ನು ಕೇವಲ ಒಂದು ಗಂಟೆ ಸಹ ಪೊಲೀಸರು ಸ್ಟೇಷನ್ ನಲ್ಲಿ ಇಟ್ಟುಕೊಳ್ಳಲು ಆಗುತ್ತಿರಲಿಲ್ಲ. ಸುಲಭವಾಗಿ ಜಾಮೀನು ಪಡೆದು ಅವರು ಎಸ್ಕೇಪ್ ಆಗುತ್ತಿದ್ದರು. ಹಾಗಾಗಿ ಇದೀಗ ಪ್ರಬಲವಾದ ಕಾನೂನನ್ನು ತರಲಾಗುತ್ತಿದೆ. ಈ ಕಾನೂನಿಂದಾಗಿ ಬಡ್ಡಿ ಕೋರರು ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ.