Ranya Rao
ಸುದೀಪ್ ನಟನೆಯ ‘ಮಾಣಿಕ್ಯ’ ಸೇರಿದಂತೆ, ‘ಪಟಾಕಿ’, ತಮಿಳಿನ ಕೆಲ ಸಿನಿಮಾಗಳಲ್ಲಿ ನಟಿಸೊರುವ ನಟಿ ರನ್ಯಾ ರಾವ್ ನಿನ್ನೆ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. 14 ಕೆಜಿಗೂ ಹೆಚ್ಚು ಚಿನ್ನವನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡಿರುವ ಆರೋಪ ಈ ನಟಿಯ ಮೇಲಿದೆ. ಡಿಆರ್’ಐ ನವರು ನಟಿಯನ್ನು ಬಂಧಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ರನ್ಯಾ ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ಗಲ್ಫ್ ದೇಶಗಳಿಗೆ ಹೋಗಿ ಬಂದಿದ್ದರಂತೆ. ದೆಹಲಿಯ ಡಿಆರ್’ಐಗೆ ಅನುಮಾನ ಬಂದು ತಪಾಸಣೆ ನಡೆಸಿದಾಗ ನಿನ್ನೆ ನಟಿ ಸಿಕ್ಕಿ ಹಾಕಿಕೊಂಡಿದ್ದಾರೆ.
ನಟಿ ರನ್ಯಾ ರಾವ್ ಹಿನ್ನೆಲೆ ಸಾಮಾನ್ಯದ್ದೇನೂ ಅಲ್ಲ. ರನ್ಯಾ ಹಾಲಿ ಉನ್ನತ ಪೊಲೀಸ್ ಅಧಿಕಾರಿಯ ಪುತ್ರಿ. ಡಿಜಿಪಿ ಕೆ ರಾಮಚಂದ್ರ ರಾವ್ ಅವರ ಪುತ್ರಿ ಈ ರನ್ಯಾ. ನಟಿಯ ಬಂಧನದ ಬಳಿಕ ಮಾಧ್ಯಮಗಳ ಬಳಿ ಮಾತನಾಡಿರುವ ಡಿಜಿಪಿ ರಾಮಚಂದ್ರ ರಾವ್, ‘ನಮ್ಮ ಗೌರವವನ್ನು ಆಕೆ ಮಣ್ಣುಪಾಲು ಮಾಡಿದ್ದಾಳೆ. ನಾಲ್ಕು ತಿಂಗಳ ಹಿಂದೆ ಆಕೆ ಖ್ಯಾತ ಆರ್ಕಿಟೆಕ್ಟ್ ಜತಿನ್ ಹುಕ್ಕೇರಿಯನ್ನು ವಿವಾಹವಾಗಿದ್ದು ಆಗಿನಿಂದ ನಮ್ಮೊಂದಿಗೆ ಸಂಪರ್ಕದಲ್ಲಿ ಇಲ್ಲ. ಆಕೆ ಮತ್ತು ಆಕೆಯ ಗಂಡನ ವ್ಯವಹಾರಗಳೊಟ್ಟಿಗೆ ನಮಗೆ ಯಾವುದೇ ಸಂಬಂಧ ಇಲ್ಲ’ ಎಂದು ರಾಮಚಂದ್ರ ರಾವ್ ಹೇಳಿದ್ದಾರೆ.
ನಟಿ ರನ್ಯಾ ರಾವ್ ಗೆ ಕನ್ನಡ ಚಿತ್ರರಂಗದ ಹಿರಿಯ ನಟಿಯೊಟ್ಟಿಗೆ ಆಪ್ತ ಬಂಧ ಇದೆ ಎನ್ನಲಾಗುತ್ತಿದೆ. ರಾಜ್ ಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿರುವ ನಟಿಯೊಬ್ಬರ ಸಂಬಂಧಿಯೂ ಸಹ ಹೌದು ರನ್ಯಾ. ಅಸಲಿಗೆ ಆ ಹಿರಿಯ ನಟಿಗೆ ಮಲ ಮಗಳು ಈ ರನ್ಯಾ ಎಂಬ ಸುದ್ದಿಗಳು ಇವೆ. ಆದರೆ ಆ ಹಿರಿಯ ನಟಿ ಈ ಬಗ್ಗೆ ಎಲ್ಲೂ ಮಾತನಾಡಿಲ್ಲ.
Sudeep: ಡಿಕೆಶಿಗೆ ಢಿಚ್ಚಿ ಕೊಟ್ಟ ಸುದೀಪ್ ಆಪ್ತ, ಆದರೆ ಮುಂದಿದೆಯೇ ಮಾರಿ ಹಬ್ಬ?
ಇನ್ನು ನಟಿ ರನ್ಯಾ ವಿಷಯಕ್ಕೆ ಬರುವುದಾದರೆ, ಗಲ್ಫ್ ದೇಶಕ್ಕೆ ಹೋಗುವಾಗಲೆಲ್ಲ ನಟಿ ರನ್ಯಾ, ಹಿರಿಯ ಅಧಿಕಾರಿಗಳು ಬಳಸುವ ಅಫಿಷಿಯಲ್ ಪ್ರೋಟೊಕಾಲ್ ಸರ್ವೀಸ್ ಅನ್ನು ಬಳಸಿ ಸೆಕ್ಯುರಿಟಿ ಚೆಕ್ ನಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ಮತ್ತು ಪ್ರತಿಬಾರಿ ಚಿನ್ನ ಕಳ್ಳಸಾಗಣೆಗೆ ಹೋದಾಗಲು ಒಂದೇ ರೀತಿಯ ಬಟ್ಟೆ ಹಾಕಿಕೊಂಡು ಹೋಗುತ್ತಿದ್ದರಂತೆ. ಬೆಲ್ಟ್ ನ ಒಳಗೆ ಚಿನ್ನದ ಗಟ್ಟಿಗಳನ್ನು ಇಟ್ಟುಕೊಂಡು, ಆ ಬೆಲ್ಟು ಹೊರಗೆ ಕಾಣದಂತೆ ಬಟ್ಟೆ ಹಾಕಿಕೊಂಡು ಬರುತ್ತಿದ್ದರಂತೆ ರನ್ಯಾ. ಹಾಗಾಗಿ ಯಾರಿಗೂ ಸಹ ನಟಿಯ ಮೇಲೆ ಅನುಮಾನ ಬಂದಿರಲಿಲ್ಲ. ಆದರೆ ದೆಹಲಿಯಲ್ಲಿ ಕೂತಿದ್ದ ಡಿಆರ್’ಐ ಅಧಿಕಾರಿಗಳಿಗೆ ಅನುಮಾನ ಬಂದು ತಪಾಸಣೆ ನಡೆದಾಗ ಕಳ್ಳಿ ಸಿಕ್ಕಿಬಿದ್ದಿದ್ದಾಳೆ.