Liquor Price
ವಿಧಾನಸಭೆ ಕಲಾಪದಲ್ಲಿ ನಿನ್ನೆಯ ದಿನ ಮದ್ಯದ ಬಗ್ಗೆ ಆಸಕ್ತಿಕರ ಚರ್ಚೆ ನಡೆಯಿತು. ವಿಶೇಷವೆಂದರೆ ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ, ಮಹಿಳೆಯರಿಗೆ 2000, ಉಚಿತ ಬಸ್ ಪ್ರಯಾಣ ಕೊಟ್ಟಂತೆ ಪುರುಷರಿಗೆ ಪ್ರತಿವಾರ ಎರಡು ಬಾಟಲಿ ಮದ್ಯ ಕೊಡಿ ಎಂದು ಬೇಡಿಕೆ ಇಟ್ಟರು. ಶಾಸಕರ ಈ ಬೇಡಿಕೆ ವಿಧಾನಸಭೆಯಲ್ಲಿ ನಗು ಮತ್ತು ಚರ್ಚೆಗೆ ಕಾರಣವಾಯ್ತು.
ಈ ವರ್ಷದ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಬಜಾರಿ ಇಲಾಖೆಯ ಟಾರ್ಗೆಟ್ ಅನ್ನು 36 ಸಾವಿರ ಕೋಟಿಯಿಂದ 40 ಸಾವಿರ ಕೋಟಿ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ಆರಂಭಿಸಿದ ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ, ತೆರಿಗೆ ಹೆಚ್ಚು ಮಾಡದೆ ಈ ಗುರಿಯನ್ನು ತಲುಪುವುದಾದರೂ ಹೇಗೆ, ಈಗಾಗಲೇ ಮದ್ಯದ ಮೇಲೆ ಹಲವು ಬಾರಿ ತೆರಿಗೆ ಹೆಚ್ಚು ಮಾಡಲಾಗಿದೆ. ಇನ್ನೂ ಏರಿಕೆ ಮಾಡುತ್ತಾ ಸಾಗಿದರೆ ಕಷ್ಟವಾಗುತ್ತದೆ ಎಂದರು.
ಕರ್ನಾಟಕದಲ್ಲಿ ಅತಿ ಹೆಚ್ಚು ಕುಡಿಯುತ್ತಿರುವುದು ಬಡ ಮತ್ತು ಮಧ್ಯಮ ವರ್ಗದ ಕಾರ್ಮಿಕ ವರ್ಗ. ಸರ್ಕಾರ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ನೀಡುತ್ತಿದೆ ಆದರೆ ಮದ್ಯದ ಮೇಲಿನ ತೆರಿಗೆ ಹೆಚ್ಚಳದಿಂದಾಗಿ ಅದೇ ಕುಟುಂಬದ ಪುರುಷರು ವಾರಕ್ಕೆ ನಾಲ್ಕು ಸಾವಿರ ರೂಪಾಯಿ ಖರ್ಚು ಮಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂದುವರೆದು ಮಾತನಾಡಿ, ಸರ್ಕಾರ, ಪುರುಷರಿಗೆ ಪ್ರತಿವಾರ ಎರಡು ಬಾಟಲಿ ಮದ್ಯ ಉಚಿತವಾಗಿ ನೀಡಿ ಬಿಡಲಿ’ ಎಂದು ಸಲಹೆ ನೀಡಿದರು.
Beer: ಮತ್ತೆ ಮದ್ಯ ಪ್ರಿಯರ ಜೇಬಿಗೆ ಕೈಹಾಕಿದ ಸರ್ಕಾರ, ಈ ಬಾರಿ ಎಷ್ಟು ಹೆಚ್ಚಳ?
ಇದಕ್ಕೆ ಪ್ರತಿಕ್ರಿಯಿಸಿದ ಕೆಜೆ ಜಾರ್ಜ್, ‘ನೀವು ಗೆದ್ದು ಸರ್ಕಾರ ರಚನೆ ಮಾಡಿದಾಗ ಈ ನಿರ್ಧಾರ ಕೈಗೊಳ್ಳಿ ಆದರೆ ಈಗ ಆಗುವುದಿಲ್ಲ’ ಎಂದರು. ಮುಂದುವರೆದು ಮಾತನಾಡಿ, ‘ನಾವು ತೆರಿಗೆ ಹೆಚ್ಚಳದ ಮೂಲಕ ಹೆಚ್ಚು ಜನ ಕುಡಿಯುವುದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು. ಇದೇ ಚರ್ಚೆಯಲ್ಲಿ ಭಾಗಿಯಾದ ಇನ್ನೂ ಕೆಲವು ಶಾಸಕರು ಮದ್ಯವನ್ನು ಸಂಪೂರ್ಣವಾಗಿ ನಿಷೇಧ ಮಾಡಿಬಿಡಿ ಎಂದು ಸಹ ಒತ್ತಾಯ ಮಾಡಿದರು.
ಅಸಲಿಗೆ ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಮದ್ಯದ ಮೇಲೆ ಅತಿಯಾದ ತೆರಿಗೆ ಹೇರಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸುಮಾರು ಮೂರು ಬಾರಿ ಮದ್ಯದ ಬೆಲೆಗಳನ್ನು ಏರಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ಮತ್ತೊಮ್ಮೆ ಮದ್ಯದ ಬೆಲೆ ಏರುವ ಸಾಧ್ಯತೆ ಇದೆ.