DK Shivakumar: ನಟರಿಗೆ ವಾರ್ನಿಂಗ್ ಕೊಟ್ಟಿದ್ದೇಕೆ ಡಿಕೆ ಶಿವಕುಮಾರ್, ಯಾರ ಮೇಲೆ ಕೋಪ?

0
43

DK Shivakumar

ನಿನ್ನೆ (ಮಾರ್ಚ್ 02) ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್, ಕನ್ನಡ ಚಿತ್ರರಂಗದ ಸಿನಿಮಾ ನಟರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ‘ನಿಮ್ಮ ನೆಟ್ಟು, ಬೋಲ್ಟು ಎಲ್ಲಿ ಟೈಟ್ ಮಾಡಬೇಕು ಎಂಬುದು ನನಗೆ ಗೊತ್ತಿದೆ’ ಎಂದು ಖಾರವಾಗಿಯೇ ಹೇಳಿದ್ದಾರೆ. ಮಾತ್ರವಲ್ಲದೆ, ‘ಸರ್ಕಾರ ಅನುಮತಿಯೇ ಕೊಡದಿದ್ದರೆ ಸಿನಿಮಾ ಶೂಟಿಂಗ್ ಹೇಗೆ ಮಾಡುತ್ತೀರಿ’ ಎಂದು ಬೆದರಿಕೆ ಮಾದರಿಯಲ್ಲಿ ಪ್ರಶ್ನೆ ಮಾಡಿದ್ದಾರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್.

ಡಿಕೆಶಿ ಹೇಳಿಕೆ ಬಳಿಕ ಎಲ್ಲರಿಗೂ ಮೂಡಿರುವ ಪ್ರಶ್ನೆ ಏನೆಂದರೆ ಡಿಕೆ ಶಿವಕುಮಾರ್, ಯಾವ ನಟರನ್ನು ಗಮನದಲ್ಲಿ ಇಟ್ಟುಕೊಂಡು ಮೇಲಿನ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದು. ಏಕೆಂದರೆ ಅದೇ ಭಾಷಣದಲ್ಲಿ ಡಿಕೆ ಶಿವಕುಮಾರ್ ಹೇಳಿದರು, ‘ನಟರು ನಮ್ಮನ್ನು ಬೇರೆ ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ, ಕೆಲಸ ಆದ ಮೇಲೆ ಬಿಸಾಡುತ್ತಾರೆ’ ಎಂದಿದ್ದಾರೆ. ಅಲ್ಲಿಗೆ, ಯಾರೋ ಡಿಕೆಶಿ ಅವರಿಂದ ಸಹಾಯ ಪಡೆದ ಆದರೆ ಮರು ಸಹಾಯ ಕೇಳಿದಾಗ ನಿರಾಕರಿಸಿದ ನಟರನ್ನೇ ಉದ್ಧೇಶಿಸಿಕೊಂಡು ಡಿಕೆಶಿ ಮೇಲ್ಕಂಡ ಮಾತುಗಳನ್ನಾಡಿದ್ದಾರೆ ಎಂಬುದು ಖಾತ್ರಿ.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಡಿಕೆ ಶಿವಕುಮಾರ್ ಅವರ ಮುಂದಾಳತ್ವದಲ್ಲಿ ನಡೆದ ‘ನೀರಿಗಾಗಿ ನಮ್ಮ ಹೋರಾಟ’ ಪಾದಯಾತ್ರೆಗೆ ಡಿಕೆ ಶಿವಕುಮಾರ್ ಹಲವು ನಟರನ್ನು ಆಹ್ವಾನಿಸಿದ್ದರು. ಆದರೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು ಸಾಧುಕೋಕಿಲ ಮತ್ತು ದುನಿಯಾ ವಿಜಿ ಇಬ್ಬರೇ. ಇದು ಡಿಕೆಶಿ ಸಿಟ್ಟಿಗೆ ಕಾರಣವಾಗಿತ್ತು. ಅಂದು ನಟ ಶಿವರಾಜ್ ಕುಮಾರ್ ಅವರು ಅರ್ಧ ದಾರಿಗೆ ಹೋಗಿ ವಾಪಸ್ಸಾಗಿದ್ದರು ಎಂಬುದನ್ನು ಗಮನಿಸಬೇಕು.

Ashwini Puneeth Rajkumar: ಪುನೀತ್ ಬಿಟ್ಟು ಹೋದ ಸತ್ ಕಾರ್ಯ ಮುಂದುವರೆಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ನಿನ್ನೆಯ ಕಾರ್ಯಕ್ರಮದಲ್ಲಿಯೇ ಈ ವಿಷಯವನ್ನು ಡಿಕೆಶಿ ಉಲ್ಲೇಖ ಮಾಡಿದರು. ಆದರೆ ಆಗ ಪರಿಸ್ಥಿತಿ ಬೇರೆ ಇತ್ತು. ರಾಜ್ಯದಲ್ಲಿ ಆಡಳಿತದಲ್ಲಿದ್ದ ಬೊಮ್ಮಾಯಿ ಸರ್ಕಾರ, ಪಾದಯಾತ್ರೆ ಮಾಡುವುದು ಕೋವಿಡ್ ನಿಯಮದ ಉಲ್ಲಂಘನೆ ಎಂದಿತ್ತು. ಪಾದಯಾತ್ರೆಗೆ ಅನುಮತಿ ನಿರಾಕರಿಸಿತ್ತು. ಕೋವಿಡ್ ನಿಯಮಗಳು ಇನ್ನೂ ಜಾರಿಯಲ್ಲಿದ್ದವು. ಹಾಗಾಗಿ ಹಲವು ನಟರು ಪಾದಯಾತ್ರೆಯಲ್ಲಿ ಭಾಗವಹಿಸಲು ಹಿಂದೇಟು ಹಾಕಿದರು.

‘ನನ್ನನ್ನು ಬಳಸಿಕೊಂಡು ಬಿಸಾಡುತ್ತಿದ್ದಾರೆ’ ಎಂದು ಡಿಕೆಶಿ ಹೇಳಿದ ಮಾತಿನ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗೆ ಕೆಲ ತಿಂಗಳ ಹಿಂದಷ್ಟೆ ದರ್ಶನ್ ಜೈಲಿಗೆ ಹೋದ ಬಳಿಕ ವಿಜಯಲಕ್ಷ್ಮಿ ದರ್ಶನ್, ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಕೆಲ ಮನವಿ ಮಾಡಿದ್ದರು. ಅದಾದ ಕೆಲ ವಾರಗಳ ಬಳಿಕ ದರ್ಶನ್​ಗೆ ಜಾಮೀನು ಸಿಕ್ಕಿತ್ತು. ದರ್ಶನ್ ಮಾತ್ರವೇ ಎಂದಲ್ಲ, ಕನ್ನಡ ಚಿತ್ರರಂಗದ ಹಲವಾರು ನಟರು ಡಿಕೆ ಶಿವಕುಮಾರ್ ಅವರೊಟ್ಟಿಗೆ ಗೆಳೆತನ ಹೊಂದಿದ್ದಾರೆ. ಅವರಿಂದ ಕೆಲಸಗಳನ್ನು ಮಾಡಿಸಿಕೊಂಡಿದ್ದಾರೆ. ಸಹಾಯಗಳನ್ನು ಪಡೆದುಕೊಂಡಿದ್ದಾರೆ. ಆದರೆ ಅವರು ಸರ್ಕಾರದ ಪರವಾಗಿ ಕೇಳಿದಾಗ ನಟರು ಆಗುವುದಿಲ್ಲ ಎಂದಿರುವುದು ಅವರ ಸಿಟ್ಟಿಗೆ ಕಾರಣ ಆಗಿದೆ.

LEAVE A REPLY

Please enter your comment!
Please enter your name here